ಶಿರಸಿ: ಶಂಕರ ಜಯಂತಿ ನಿಮಿತ್ತ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ಮೇ.1ರಂದು ಶಿರಸಿ ಯೋಗ ಮಂದಿರದಲ್ಲಿ ಹಾಗೂ ಮೇ.2 ರಂದು ಸ್ವರ್ಣವಲ್ಲೀಯಲ್ಲಿ ದಾರ್ಶನಿಕರ ದಿನ ಮಹೋತ್ಸವವನ್ನು ಆಯೋಜಿಸಲಾಗಿದೆ.
ಮೇ.1ರಂದು ಶಿರಸಿಯ ಯೋಗ ಮಂದಿರದಲ್ಲಿ ಬೆಳಿಗ್ಗೆ 9.30ರಿಂದ ಮಾತೆಯರಿಂದ ಶ್ರೀಶಂಕರ ಸ್ತೋತ್ರ ಪಾರಾಯಣ ನಡೆಯಲಿದ್ದು, ಸಂಜೆ 4.30ರಿಂದ ನಡೆಯುವ ಧರ್ಮಸಭೆಯಲ್ಲಿ ಸ್ವರ್ಣವಲ್ಲೀ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿ ಶ್ರೀ ಅನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳು ಸಾನ್ನಿಧ್ಯವಹಿಸಲಿದ್ದಾರೆ.
ಅಭ್ಯಾಗತರಾಗಿ ತುಮಕೂರು ಮಾದಿಹಳ್ಳಿ ರಾಮಕೃಷ್ಣ ಮಠದ ಮಂಗಲಾನಾಥಾನಂದ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಇದೇ ವೇಳೆ ಪ್ರಸಿದ್ಧ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರಿಗೆ ಸಾಧನಾ ಶಂಕರ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮೇ.2ರಂದು ಬೆಳಿಗ್ಗೆ ಸ್ವರ್ಣವಲ್ಲೀ ಮಠದಲ್ಲಿ ಮಾತೆಯರಿಂದ ಸಮಗ್ರವಾಗಿ ಶ್ರೀ ಶಂಕರ ಸ್ತೋತ್ರ ಪಠಣ ನಡೆಯಲಿದೆ. ಜತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಶ್ರೀ ಶಂಕರರಿಗೆ ವಿಶೇಷ ಪೂಜೆ ಕೂಡ ನಡೆಯಲಿವೆ. ಸಂಜೆ 4 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳು ಸಾನ್ನಿಧ್ಯವಹಿಸಲಿದ್ದಾರೆ.
ಅತಿಥಿಗಳಾಗಿ ಕಾರ್ಕಳದ ಜನಪ್ರಿಯ ವೈದ್ಯ ಡಾ. ಜಗದೀಶ ಪೈ ಭಾಗವಹಿಸಲಿದ್ದು, ಸಾಧನಾ ಶಂಕರ ಪ್ರಶಸ್ತಿಯನ್ನು ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ವೇದಾಂತ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಗಣಪತಿ ಭಟ್ಟ ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ಸ್ವರ್ಣವಲ್ಲೀ ಮಠದ ಪ್ರಕಟನೆಯಲ್ಲಿ ತಿಳಿಸಿದೆ.